ಕೈ ತುತ್ತು ಹಾಗೂ ೭೪೧೧೧೯೦೪೨೯ ನಂಥ ವಿಭಿನ್ನ ಕಥಾ ಹಂದರವುಳ್ಳ ಚಿತ್ರಗಳನ್ನು ನಿರ್ದೇಶಿಸಿರುವ ರಾಜೀವ್ ಕೃಷ್ಣ ಗಾಂಧಿ ಇದೀಗ ಮತ್ತೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಮರ್ಯಾದಾ ಹತ್ಯೆಯಂಥ ಸಾಮಾಜಿಕ ಪಿಡುಗಿನ ಹಿನ್ನಲೆಯಲ್ಲಿ ಒಂದು ವಿಭಿನ್ನವಾದ ಪ್ರೇಮಕಥೆಯನ್ನು ಹೊಂದಿರುವ ರಂಗನ್ ಲವ್ ಸ್ಟೋರಿ ಹೆಸರಿನ ಈ ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ನಡೆಯಿತು. ಚಿಂತಾಮಣಿಯು ಶ್ರೀ ಸತ್ಯನಾರಾಯಣಸ್ವಾಮಿ ದೇವಸ್ಥಾನದಲ್ಲಿ ನಡೆದ ಚಿತ್ರೀಕರಣ ಆರಂಭದ ದೃಶ್ಯಕ್ಕೆ ನಾಗರಾಜ್ ಕ್ಲಾಪ್ ಮಾಡಿದರು. ಆನಂದಶರ್ಮ ಅವರು ಕ್ಯಾಮರಾ ಸ್ವಿಚ್ ಆನ್ ಮಾಡಿದರು.
ಮದ್ಯಮ ವರ್ಗದ ಯುವಕ ಯುವತಿಯರು ಪ್ರೀತಿ-ಪ್ರೇಮದ ಬಲೆಗೆ ಬಿದ್ದಾಗ ಅದರಿಂದುಂಟಾಗುವ ತೊಂದರೆ, ಕಷ್ಟಗಳು, ಊರಿನಲ್ಲಿ ಗಲಾಟೆಗಳು ಹಾಗೂ ಮರ್ಯಾದಾ ಹತ್ಯೆಯಂಥ ಸಾಮಾಜಿಕ ಪಿಡುಗು ಈ ಎಲ್ಲಾ ಅಂಶಗಳನ್ನೊಳಗೊಂಡ ಕಥೆ ಇದಾಗಿದೆ. ಅಲ್ಲದೆ ಕ್ರೈಂ ಹಾಗೂ ಪಾತಕ ಜಗತ್ತನ್ನು ಪ್ರತಿಬಿಂಬಿಸುವಂಥ ಕೆಲ ವಿಷಯಗಳು ಕೂಡ ಈ ಚಿತ್ರದಲ್ಲಿವೆ. ಚಿತ್ರಕಥೆಗೆ ಪೂರಕವಾದಂತೆ ಕೇವಲ ೩ ಹಾಡುಗಳು ಮಾತ್ರ ಈ ಚಿತ್ರದಲ್ಲಿದ್ದು ವಿನೋದ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಕಾಡುಮಲ್ಲೇಶ್ವರ ಬೆಟ್ಟ, ಕೈಲಾಸಗಿರಿ, ಆಜಾದ್ ಚೌಕದ ಮನೆ ಹಾಗೂ ಚಿಂತಾಮಣಿ ನಗರದ ಸುತ್ತಮುತ್ತ ಸುಮಾರು ೩೦ ದಿನಗಳ ಕಾಲ ರಂಗನ್ ಲವ್ ಸ್ಟೋರಿ ಯನ್ನು ಚಿತ್ರೀಕರಿಸಲಾಗುವುದು ಎಂದು ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದು ನಿರ್ದೇಶನ ಮಾಡುತ್ತಿರು ರಾಜೀವ್ ಕೃಷ್ಣಗಾಂಧಿ ತಿಳಿಸಿದ್ದಾರೆ.
ಅಮೃತ ಚಿತ್ರ ಸಂಸ್ಥೆಯಲ್ಲಿ ಬಿ.ಆರ್.ಭಾಗ್ಯರಂಗನಾಥ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಆರ್.ಪ್ರಮೋದ್ ಛಾಯಾಗ್ರಹಣ, ವಿನೋದ್ ಸಂಗೀತ್, ಎಸ್.ಎಸ್.ಕೆ.ಸಂದೀಪ್ ನೃತ್ಯ, ಆರ.ಡಿ.ರವಿ ಸಂಕಲನ, ರಾಜೀವ್ ಕೃಷ್ಣ ಸಾಹಿತ್ಯ ಬಾಬು ಕಲಾನಿರ್ದೇಶನವಿದೆ. ಕಿರಣ್ರಾಜ್, ಶೃತಿಲಯ, ರಾಜೇಂದ್ರ, ಕಿಲ್ಲರ್ ವೆಂಕಟೇಶ್, ಜ್ಯೋತಿಮೂರುರು, ನಾರಾಯಣಸ್ವಾಮಿ, ವೆಂಕಿ, ಮಹಂತೇಶ್, ವಿಕ್ರಂ ಸೂರಿ ತಾರಾಬಳಗದಲ್ಲಿದ್ದಾರೆ.